ವಿಜಯ ಸಂಘರ್ಷ
ಹೊಸನಗರ(ರಿಪ್ಪನ್ಪೇಟೆ): ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರು ಪಂಚಮಸಾಲಿ ಲಿಂಗಾಯಿತ ಜಾತಿಗೆ 2(ಎ) ಮೀಸಲಾತಿ ನೀಡುವಂತೆ ಒತ್ತಾಯಿಸಿ ಜಾಗೃತ ಸಭೆ ನಡೆಸಿ ವೀರಶೈವ ಸಮಾಜದಲ್ಲಿ ಒಡಕು ಹುಟ್ಟುಹಾಕುವ ಪ್ರಯತ್ನ ನಡೆಸುತ್ತಿ ದ್ದಾರೆಂದು ವೀರಶೈವ ಜಾಗೃತಿ ವೇದಿಕೆಯ ಮುಖಂಡ, ತಾ ಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು ಸಮಾಜದ ಎಲ್ಲಾ ಬಾಂಧವರು ಹೊಂದಿಕೊಂಡು ಹೋಗಬೇಕಾಗಿದೆ. ವೀರಶೈವರು ಹಾಗೂ ಲಿಂಗಾಯತರು ಒಂದೇ ಆಗಿದ್ದು ಸಮಾಜವನ್ನು ಒಡೆಯುವ ಕೆಲಸಕ್ಕೆ ಯಾರು ಕೈ ಹಾಕಬಾರದು.ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಮಾಜದ ಎಲ್ಲಾ ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಸಮಾಜದ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕೆ ಹೊರತು ಹಳ್ಳಿ ಹಳ್ಳಿಗೆ ಭೇಟಿ ಕೊಟ್ಟು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಬಾರದು. ಸಮಾಜ ಒಡೆಯುವ ಕೆಲಸಕ್ಕೆ ಈ ಹಿಂದೆ ಪ್ರಭಾವಿ ಸಚಿವರುಗಳಾದ ಎಂ ಬಿ ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ಕೈ ಹಾಕಿ ಕಹಿ ಅನುಭವಿಸಿದ್ದಾರೆ ಎಂದರು.
ಒಳಪಂಗಡಗಳನ್ನು ಒಂದುಗೂಡಿಸಿ ಎಲ್ಲರಿಗೂ 2 (ಎ) ಮೀಸಲಾತಿ ದೊರಕಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ, ಆದರೆ ಪಂಚಮ ಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಜನರ ಮತ್ತು ಒಳಪಂಗಡ ಗಳಲ್ಲಿ ಜಾಗೃತ ಸಭೆ ನಡೆಸುವುದು ಅಗತ್ಯವಿಲ್ಲ. ಜಾಗೃತ ಸಭೆ ನಡೆಸುವುದೇ ಇದ್ದರೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಸಮಾಜದ ಎಲ್ಲಾ ಮಠಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಭೆ ನಡೆಸಲಿ. ಅದನ್ನು ಬಿಟ್ಟು ಮಿಸಲಾತಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಣ್ಣಪುಟ್ಟ ಒಳಪಂಗಡವನ್ನು ಒಡೆಯುವ ಕೆಲಸ ಮಾಡುತ್ತಿರುವ ಶ್ರೀಗಳಿಗೆ ತಾಲ್ಲೂಕಿನಲ್ಲಿ ಜಾಗೃತ ಸಭೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ಸಚಿನ್ ಗೌಡ, ಮುಖಂಡರಾದ ಮೆಣಸೆ ಆನಂದ್, ಸ್ವಾಮಿ ಗೌಡ,ಜಂಬಳ್ಳಿ ಗಿರೀಶ್,ಯೊಗೇಂದ್ರ ಗೌಡ, ತೀರ್ಥೆಶ್, ದೇವೆಂದ್ರಪ್ಪ ಗೌಡ, ರಾಜೇಂದ್ರ ಸೇರಿದಂತೆ ಸಮಾಜದ ಇನ್ನಿತರ ಪ್ರಮುಖರಿದ್ದರು.
ವರದಿ : ರಫ಼ಿ ರಿಪ್ಪನ್ ಪೇಟೆ
ವಿಜಯ ಸಂಘರ್ಷಕ್ಕೆ ಸುದ್ದಿ ನೀಡಲು ಕರೆ ಮಾಡಿ +91 9743225795
