ಎಸಿ, ಎಸ್ಟಿ ಹಾಸ್ಟೆಲ್‌ಗೆ ಶಾಸಕರ ದಿಢೀರ್ ಭೇಟಿ: ವಾರ್ಡನ್ ಗೆ ಫುಲ್ ಕ್ಲಾಸ್

ವಿಜಯ ಸಂಘರ್ಷ ನ್ಯೂಸ್ 
ಸುರಪುರ: ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ರಾಜಾ ವೇಣುಗೋಪಾಲ್ ನಾಯಕ್ ಸೋಮವಾರ ದಿಢೀರ್ ಭೇಟಿ ನೀಡಿದರು.

ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳ ಕುರಿತು ವಾರ್ಡ್‌ನ್‌ ಅವರಿಂದ ಮಾಹಿತಿ ಪಡೆದ ಅವರು, ಉಗ್ರಾಣಕ್ಕೆ ಹೋಗಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದರು. ಹಾಸ್ಟೆಲ್ ಆವರಣ, ಕೊಠಡಿಗಳು, ಶೌಚಾಲಯ ಹಾಗೂ ಅಡುಗೆ ಕೋಣೆಗಳ ಸ್ವಚ್ಛತೆಯನ್ನು ವೀಕ್ಷಿಸಿದರು.

 *ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ*

 ವಾರ್ಡ್‌ನ್‌ ನಮ್ಮನ್ನು ಗದರಿಸುತ್ತಾರೆ. ಬೆದರಿಕೆಯಿಂದ ನಮ್ಮನ್ನು ಇಟ್ಟಿದ್ದಾರೆ. ಹಾಲಿಗೆ ಹೆಚ್ಚು ನೀರು ಬೆರೆಸಿಕೊಡುತ್ತಾರೆ. ನೋಡಿ ಸರ್ ಎಂದು ವಿದ್ಯಾರ್ಥಿಗಳು ಹಾಲಿನ ಲೋಟ ತಂದು ತೋರಿಸಿದ್ದರು. ಹಾಗೆಯೇ ಮಧ್ಯಾಹ್ನದ ಚಪಾತಿಯನ್ನು ರಾತ್ರಿ ಕೊಡುತ್ತಾರೆ. ಮೆನು ಪ್ರಕಾರ ತಿಂಡಿ, ಊಟ ಕೊಡುವುದಿಲ್ಲ ಎಂಬ ಹಲವು ಸಮಸ್ಯೆಗಳನ್ನು ಅಲವತ್ತು ಕೊಂಡರು.

*ಹಾಸ್ಟೆಲ್ ವಾರ್ಡನ್ ಗೆ ಶಾಸಕರ ಕ್ಲಾಸ್..!*

 ವಾರ್ಡನ್ (ಮೇಲ್ವಿಚಾರಕ) ಮಕ್ಕಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.ಸಮಯ ಪರಿಪಾಲನೆ ಮಾಡಲ್ಲ, ಸರಿಯಾದ ಬಾಳೆಹಣ್ಣು ವಿತರಣೆ ಮಾಡುವುದಿಲ್ಲ ಎಂದು ಮಕ್ಕಳಿಂದ ದೂರು ಬಂದ ಹಿನ್ನೆಲೆ ಶಾಸಕರು ವಾರ್ಡನ್ ಗೆ ಎಚ್ಚರಿಕೆ ನೀಡಿದರು.

ಪರಿಶಿಷ್ಟ ಬಾಲಕರ ವಿದ್ಯಾರ್ಥಿ ನಿಲಯ ಆವರಣದಲ್ಲೇ ನಿಂತ ಚರಂಡಿ ನೀರು ಶಾಸಕರಿಗೆ ಆಹ್ವಾನ ನೀಡಿತು. ಹಾಸ್ಟೆಲ್ ಸುತ್ತ ಜಾಲಿ, ಕುರುಚಲು ಬೆಳೆದಿದ್ದು, ಇಂಗು ಗುಂಡಿ ಸಹ ನಿರ್ಮಿಸದೆ ಇರುವುದನ್ನು ಕಂಡ ಶಾಸಕರು, ವಾರ್ಡನ್ ನಿರ್ಲಕ್ಷದ ವಿರುದ್ಧ ಕಿಡಿಕಾರಿದರು. ಸ್ವಚ್ಛತೆಯತ್ತ ಗಮನ ಹರಿಸುವಂತೆ ಸಲಹೆ ನೀಡಿದರು.

ವಿದ್ಯಾರ್ಥಿಗಳೊಂದಿಗೆ ಶಾಸಕರು ಬೆಳಗಿನ ತಿಂಡಿಯನ್ನು ಸವಿದರು ನಂತರ ಶಾಸಕರು ಮಾತನಾಡಿ ‘ಇನ್ನು ಮುಂದೆ ಹೆದರಬೇಡಿ, ನಿಮಗೆ ಮೆನು ಪ್ರಕಾರವೇ ತಿಂಡಿ, ಊಟ ಕೊಡುತ್ತಾರೆ. ಧೈರ್ಯವಾಗಿರಿ, ನಿಮಗೆ ಸಮಸ್ಯೆ ಎದುರಾದರೆ ತಕ್ಷಣ ನನಗೆ ಕರೆ ಮಾಡಿ’ ಎಂದು ಧೈರ್ಯ ತುಂಬಿ ಸಾಂತ್ವನ ಹೇಳಿದರು.

ವರದಿ : ಶಿವು ರಾಠೋಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು