ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಮೈಕ್ರೋ ಫೈನಾನ್ಸ್ ಕಂಪನಿ ಗಳ ಕಿರುಕುಳ, ದೌರ್ಜನ್ಯ ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಿ ದರೂ ಯಾವುದೇ ಪ್ರಯೋಜನ ವಾಗಿಲ್ಲ. ನಗರದ ಮೈಕ್ರೋ ಫೈನಾನ್ಸ್ ಕಂಪನಿಯೊಂದು ರೈತ ಕುಟುಂಬವನ್ನು ಸುಮಾರು 1 ತಿಂಗಳ ಕಾಲ ಬೀದಿಗೆ ತಳ್ಳಿರುವ ಘಟನೆ ಬೆಳಕಿಗೆ ಬಂದಿದೆ.
ಮತ್ತೊಂದೆಡೆ ಇದರ ವಿರುದ್ಧ ರೈತ ಸಂಘ ಧ್ವನಿ ಎತ್ತುವ ಮೂಲಕ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡು ವಲ್ಲಿ ಮುಂದಾಗಿದೆ.
ತಾಲೂಕಿನ ಆಗರದಹಳ್ಳಿ ಗ್ರಾಮದ ನಿವಾಸಿ, ಭೋವಿ ಜನಾಂಗದ ಕೃಷಿ ಕೂಲಿ ಕಾರ್ಮಿಕ ಚೌಡಪ್ಪ ನಗರದ ಇಕ್ವಿಟಾಸ್ ಫೈನಾನ್ಸ್ನಿಂದ ಸುಮಾರು 2 ಲಕ್ಷ ರು. ಸಾಲ 2021ರಲ್ಲಿ ಪಡೆದಿದ್ದು, ಈಗಾಗಲೇ ಸಾಲದ 9 ಕಂತು ಗಳನ್ನು ಫೈನಾನ್ಸ್ ಗೆ ಪಾವತಿಸಿದ್ದಾರೆ. ಈ ನಡುವೆ ಬಾಕಿ ಉಳಿದ ಹಣ ವಸೂಲಿ ಗಾಗಿ ಫೈನಾನ್ಸ್ ನವರು ಒಂದು ತಿಂಗಳ ಹಿಂದೆ ಚೌಡಪ್ಪ ಹಾಗೂ ಸಹೋದರ ರಿಗೆ ಸೇರಿದ 30X50 ಅಡಿ ವಿಸ್ತೀರ್ಣದ ಎರಡು ಮನೆಗಳಿಗೆ ಬೀಗ ಜಡಿದು ಕುಟುಂಬದ ಸುಮಾರು 15 ಮಂದಿ ಬೀದಿಯಲ್ಲಿ ಕಾಲ ಕಳೆಯುವಂತೆ ಮಾಡಿದ್ದು, ಶಾಲಾ ಕಟ್ಟಡ, ದೇವಸ್ಥಾನ ಗಳಲ್ಲಿ ಕುಟುಂಬಸ್ಥರು ಉಳಿದು ಕೊಂಡು ಜೀವನ ಸಾಗಿಸಿರುವುದು ತಿಳಿದು ಬಂದಿದೆ.
ಫೈನಾನ್ಸ್ ಕಂಪನಿಯ ಈ ಕ್ರೂರ ವರ್ತನೆಯನ್ನು ಖಂಡಿಸಿ ರೈತ ಸಂಘ ದಿಂದ ಇದರ ವಿರುದ್ದ ಹೋರಾಟ ಆರಂಭಿಸಿದ್ದು, ಮೊದಲ ಹಂತದಲ್ಲಿ ಕಳೆದ 2 ದಿನಗಳ ಹಿಂದೆ ಫೈನಾನ್ಸ್ ಕಂಪನಿಯವರು ಎರಡು ಮನೆಗಳಿಗೆ ಜಡಿದಿರುವ ಬೀಗ ತೆರವುಗೊಳಿಸಿ ಕುಟುಂಬ ಸ್ಥರಿಗೆ ಹಸ್ತಾಂತರಿಸಿದ್ದಾರೆ.
ಫೈನಾನ್ಸ್ ಕಚೇರಿಯಲ್ಲಿ ಪ್ರತಿಭಟನೆ :
ನಗರದ ಇಕ್ವಿಟಾಸ್ ಫೈನಾನ್ಸ್ ಕಚೇರಿ ಯಲ್ಲಿ ಪ್ರತಿಭಟನೆ ನಡೆಸಿದ ರೈತರು, ಫೈನಾನ್ಸ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸರ್ಕಾರ ಕಾಯ್ದೆ ಜಾರಿಗೆ ತಂದರೂ ಬಡ ರೈತರ ಮೇಲೆ ಕಿರುಕುಳ ಮುಂದುವರೆಯುತ್ತಿರುವುದು ಖಂಡನೀಯ. ತಕ್ಷಣ ಜಿಲ್ಲಾಧಿಕಾರಿ ಗಳು ಗಮನ ಹರಿಸುವ ಮೂಲಕ ಇಂತಹ ಫೈನಾನ್ಸ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಅಲ್ಲದೆ 'ಮೈಕ್ರೋಫೈನಾನ್ಸ್ ಕಂಪನಿ ಗಳೇ ಊರೊಳಗೆ ಕಾಲಿಟ್ಟರೆ ನಿಮಗೆ ಉಳಿಗಾಲವಿಲ್ಲ' ಎಂಬ ಘೋಷ ವಾಕ್ಯದೊಂದಿಗೆ ಎಚ್ಚರಿಕೆ ದಿನವಾಗಿ ಆಚರಿಸಿ ಕಚೇರಿಗೆ ನೋಟಿಸ್ ಅಂಟಿಸಲಾಯಿತು.
ಲೋಕಾಯುಕ್ತರಿಗೂ ದೂರು:
ಪ್ರತಿಭಟನೆಗೂಮೊದಲು ರೈತರು ತಾಪಂ ಸಭಾಂಗಣದಲ್ಲಿ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಜಿಲ್ಲಾ ನಿರೀಕ್ಷಕ ವೀರಬಸಪ್ಪ ಕುಶಾಲಪುರ ಅವರಿಗೆ ದೂರು ಸಲ್ಲಿಸಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದ್ದು, ಸರ್ಕಾರ ಕಾಯ್ದೆ ಜಾರಿಗೆ ತಂದರೂ ಕಿರುಕುಳ ನಿಲ್ಲುತ್ತಿಲ್ಲ. ಇಕ್ವಿಟಾಸ್ ಫೈನಾನ್ಸ್ ಕ್ರೂರ ವರ್ತನೆ ಕುರಿತು ಫೆ.4ರಂದು ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಆದರೆ ತಾಲೂಕು ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಇದಕ್ಕೆ ಸ್ಪಂದಿಸಿದ ವೀರಬಸಪ್ಪ ಕುಶಾಲಪುರ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚಿಸಿದರು. ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲಿ ಅನುಸರಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ರೈತ ಪ್ರಮುಖರಾದ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಯಶವಂತ ರಾವ್ ಘೋರ್ಪಡೆ, ಹಿರಿಯಣ್ಣಯ್ಯ, ಮಂಜುನಾಥ್, ಡಿ.ವಿ.ವೀರೇಶ್, ಚಂದ್ರಪ್ಪ, ರಂಗಪ್ಪ ಸೇರಿದಂತೆ ಗ್ರಾಮದ ಮುಖಂಡರು, ರೈತರು ಉಪಸ್ಥಿತರಿದ್ದರು.