ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಗಣಿ ಇಲಾಖೆ ಮಹಿಳಾ ಅಧಿಕಾರಿಗೆ ಶಾಸಕರ ಪುತ್ರ ಬಿ.ಎಸ್. ಬಸವೇಶ್ ಅಶ್ಲೀಲ ಪದ ಬಳಸಿದ ವೀಡಿಯೋ ಎಡಿಟೆಡ್ ಎಂದಾದರೆ ಅದನ್ನು ಎಫ್ಎಸ್ಎಲ್ ಗೆ ಕಳುಹಿಸಿ ಎಂದು ಬಿಜೆಪಿ ಸವಾಲು ಹಾಕಿದೆ.
ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರಮುಖರು ಪ್ರಕರಣವನ್ನು ವಿರೋಧಿಸಿ ಶಾಸಕ ಬಿ.ಕೆ.ಸಂಗಮೇಶ್ ಹಾಗೂ ಅವರ ಪುತ್ರ ಬಿ.ಎಸ್.ಬಸವೇಶ್ ವಿರುದ್ಧ ಬಿಜೆಪಿ ಮುಖಂಡ ಧರ್ಮಪ್ರಸಾದ್ ವಾಗ್ದಾಳಿ ನಡೆಸಿದರು.
ಮಹಿಳಾ ಅಧಿಕಾರಿಗೆ ಬಿ ಎಸ್ ಬಸವೇಶ್ ಅತ್ಯಂತ ನೀಚ ಪದ ಬಳಸಿದ ವೀಡಿಯೋ ಹೊರಬಿದ್ದ ನಂತರ ಅದು ಎಡಿಟೆಡ್ ವೀಡಿಯೋ ಎಂದು ತಳ್ಳಿ ಹಾಕುವ ಪ್ರಯತ್ನಗಳು ಸಾಮಾಜಿಕ ಜಾಲತಾಣ ದಲ್ಲಿ ಕಂಡುಬರುತ್ತಿದೆ. ಇಡೀ ಭದ್ರಾವತಿಗೆ ಬಸವೇಶ್ ಧ್ವನಿ ತಿಳಿದಿದೆ. ಹಾಗೆ ಅದು ಎಡಿಟೆಡ್ ವೀಡಿಯೋ ಆದರೆ ಅದನ್ನು ಎಫ್'ಎಸ್'ಎಲ್'ಗೆ ಕಳುಹಿಸಿ ಎಂದು ಸವಾಲು ಹಾಕಿದರು.
ಕ್ಷೇತ್ರದಲ್ಲಿ ಅಮಾಯಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದ ಅದಕ್ಕೆ ಶಾಸಕರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಾಕತ್ ಇದ್ದರೆ ನಮ್ಮ ವಿರುದ್ದ ಹೋರಾಡಿ ಎಂದು ಸವಾಲು ಹಾಕಿದರು.
ಅಧಿಕಾರಿಗಳಿಂದ ಕರ್ತವ್ಯ ಲೋಪವಾಗಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿನ ಅಧಿಕಾರಿಗಳ ಮೇಲೂ ಸಹ ದೌರ್ಜನ್ಯ ನಡೆಯುತ್ತಿದ್ದು, ಅವರುಗಳಿ ಗಾಗಿ ಇಂದು ನಾವು ಹೋರಾಡುತ್ತಿದ್ದೇವೆ.
ರಮೇಶ್ ಎನ್ನುವವರು ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿರುವುದು ಸಾಬೀತಾರೂ ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಕ್ರಮ ಮರಳು ದಂಧೆ ನಡೆಯುತ್ತಿರು ವುದು ತಿಳಿದಿದ್ದರೂ, ಇದನ್ನು ತಡೆಯದಂತೆ ಸಿಎಂ, ಡಿಸಿಎಂ ಗಳಿಂದ ಫೋನ್ ಮಾಡಿಸುತ್ತಾರೆ. ಅಧಿಕಾರಿಗಳ ಮೇಲೂ ಸಹ ಶಾಸಕರ ಕುಟುಂಬದ ದೌರ್ಜನ್ಯ ನಡೆಯುತ್ತಿದ್ದು, ಇದು ಇಡೀ ಭದ್ರಾವತಿಗೇ ಗೊತ್ತಿದೆ ಎಂದರು.
ಮಹಿಳಾ ಅಧಿಕಾರಿಗೆ ನೀಚ ಪದ ಬಳಸಿ ನಿಂದಿಸಿದ ಬಸವೇಶ್ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜುಳಾ, ಪ್ರಮುಖರಾದ ಮಂಗೋಟೆ ರುದ್ರೇಶ್ ಮತ್ತಿತರರು ಮಾತನಾಡಿದರು. ಸತೀಶ್, ಜಿ.ಆನಂದಕುಮಾರ್ ಸೇರಿದಂತೆ ಪಕ್ಷದ ನೂರಾರು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.