ವಿಜಯ ಸಂಘರ್ಷ ನ್ಯೂಸ್
ಭದ್ರಾವತಿ: ತಾಲೂಕಿನ ಕೂಡ್ಲಿಗೆರೆ ಗ್ರಾಮದ ರಾಜಣ್ಣ ಅವರ ಮನೆಯ ಆವರಣದಲ್ಲಿದ್ದ ಹುಲ್ಲಿನ ಬಣವೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿ ಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮನೆಯವರು ಹುಲ್ಲು ತೆಗೆಯುವ ವೇಳೆ ಹೆಬ್ಬಾವು ಕಣ್ಣಿಗೆ ಬಿದ್ದಿದ್ದು, ತಕ್ಷಣ ಸ್ಥಳೀಯರು ಎಚ್ಚರಿಕೆ ವಹಿಸಿ ಸ್ನೇಕ್ ರೆಸ್ಕೂವರ್ಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಸ್ನೇಕ್ ರೆಸ್ಕೂವರ್ ಬೆನ್ಸನ್ ಸ್ಥಳಕ್ಕೆ ಆಗಮಿಸಿ ಅತ್ಯಂತ ಜಾಗರೂಕತೆ ಯಿಂದ ಕಾರ್ಯಾಚರಣೆ ನಡೆಸಿದರು.
ಸುಮಾರು 10 ಅಡಿ ಉದ್ದ ಹಾಗೂ ಸುಮಾರು 15 ಕೆಜಿ ತೂಕ ಹೊಂದಿದ್ದ ಹೆಬ್ಬಾವನ್ನು ಯಾವುದೇ ಹಾನಿಯಾಗ ದಂತೆ ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು.
ಬಳಿಕ ಅರಣ್ಯ ಇಲಾಖೆಯ ಮಾರ್ಗಸೂಚಿ ಯಂತೆ ಹೆಬ್ಬಾವನ್ನು ಸೂಕ್ತ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಸುರಕ್ಷಿತವಾಗಿ ಬಿಡಲಾಯಿತು.
ಸಮಯೋಚಿತವಾಗಿ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿದ ಸ್ನೇಕ್ ರೆಸ್ಕೂವರ್ ಬೆನ್ಸನ್ ಅವರ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.